ಈತ ಸತ್ಯನಾರಾಯಣ!

ಈತ ಸತ್ಯನಾರಾಯಣ!

¾ ನಾಡೋಜ ಡಾ| ಶ್ರೀನಿವಾಸ ಹಾವನೂರ

[ಈ ಮಹತ್ವದ ಸಂಶೋಧನ  ಲೇಖನವನ್ನು ಡಾ. ಶ್ರೀನಿವಾಸ ಹಾವನೂರರು ನನಗೆ ಹಲವಾರು ವರ್ಷಗಳ ಹಿಂದೆಯೆ ಕಳಿಸಿದ್ದರು. ಅಂದು ನಾನು ಹೊರತರುತ್ತಿದ್ದ "ಕನ್ನಡ ಕಲಿ" ಮ್ಯಗ್‌ಝೀನ್‌ನಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ. ಕಡತದಲ್ಲಿ, ಹುದುಗಿ ಹೋಗಿದ್ದ ಈ ಲೇಖನ ಮತ್ತೆ ಕೈಗೆ ಸಿಕ್ಕಿದೆ. 

ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು  ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. 

ಎಲ್ಲಿಯ ವರೆಗೆ ಸತ್ಯನಾರಾಯಣನ ಪೂಜೆ ನಡೆಯುತ್ತದೋ ಅಲ್ಲಿಯ ವರೆಗೆ ಈ ಲೇಖನ ಪ್ರಸ್ತುತವೆ. ಹಾಗಾಗಿ, ಇದನ್ನು ಸಂಕೋಚವಿಲ್ಲದೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. - ವಿಶ್ವೇಶ್ವರ ದೀಕ್ಷಿತ.]

 

೧. ದೇವ ದೇವತೆಗಳ ಪೈಪೋಟಿ

ಹುಲು ಮಾನವನ ಹೃದಯವನ್ನು ಗೆದ್ದುಕೊಳ್ಳಲು ದೇವ ದೇವತೆಗಳಲ್ಲಿ ಸ್ಪರ್ಧೆ ಇರುವಂತೆ ತೋರುತ್ತದೆ. ಪೈಪೋಟಿಯಲ್ಲಿ ಕೆಲವು ದೇವರು ಹಿಂದೆ ಉಳಿದುಬಿಡುತ್ತಾರೆ. ಉದಾಹರಣೆಗೆ ತ್ರಿಮೂರ್ತಿಗಳ ಪೈಪೋಟಿಯಲ್ಲಿ, ಪಾಪ, ಬ್ರಹ್ಮ ಕೈ ಸಾಗದೇ ಉಸ್ಸೆಂದು ನಿಂತುಬಿಟ್ಟ. ಇನ್ನು ಕೆಲವರು ಸ್ಪರ್ಧೆಯಲ್ಲಿ ಒಮ್ಮೆ ಹಿಂದೆ, ಒಮ್ಮೆ ಮುಂದೆ ಸಾಗಿಬರುವುದುಂಟು. ಮತ್ತೆ ಒಬ್ಬಿಬ್ಬರು, ಈಚೆಗೆ ಜನ್ಮ ತಾಳಿದವರು, ಸುರುವಾತಿಗೆ ವೈಭವದಿಂದ ಮೆರೆಯ ಹೋದರೂ, ಹಳಬರ ಜನಪ್ರಿಯತೆಯನ್ನು ಎದುರಿಸಲಾಗದೇ ಕಣ್ಮರೆಯಾಗುತ್ತಾರೆ. ಉದಾಹರಣೆಗೆ ಜಯ್ ಸಂತೋಷಿ ಮಾ! ಅವಳ ಹೆಸರಿನ ಸಿನೆಮಾ ಹೇಳ ಹೆಸರಿಲ್ಲದಾಯಿತು. ಅವಳ ಸ್ತುತಿಪರವಾದ ‘ಜೈ ಸಂತೋಷಿ ಮಾ’ ಎಂಬ ಒಂದು ಹಾಡು ಮಾತ್ರ ಆಕಾಶವಾಣಿ ಚಿತ್ರ ಸಂಗೀತ ಕಾರ್ಯಕ್ರಮದಲ್ಲಿ ಅಪ್ಪಿತಪ್ಪಿ ಕೇಳಿಬರುವುದುಂಟು.

೨. ದೇವ‌ ಒಬ್ಬ; ನಾಮ ಹಲವು

‘ದೇವ ದೇವತೆಗಳು’ ಎಂಬ ಕೂಡು ನುಡಿಯಿದೆ. ಇದರರ್ಥ ದೇವರು ಬೇರೆ, ದೇವತೆಗಳು ಬೇರೆ ಎಂದು ತಿಳಿಯಬೇಕೆ? ‘ದೇವರು’ ಸರ್ವಶಕ್ತ, ಸರ್ವಾಂತರ್ಯಾಮಿ, ಏಕಮೇವಾದ್ವಿತೀಯ. ಅವನು ಭಾರತದಲ್ಲಿಯೂ ಇದ್ದಾನೆ, ಅಮೇರಿಕೆಯಲ್ಲಿಯೂ ಇದ್ದಾನೆ. ಆಫ್ರಿಕಾ ಖಂಡದ ಮಧ್ಯದಲ್ಲಿಯೂ ಇದ್ದಾನೆ. ‘ಈಶ್ವರ, ಅಲ್ಲಾ ತೇರೇ ನಾಮ್’ ನೆನಪಿಗೆ ತಂದುಕೊಳ್ಳಿರಿ. ಅಂತೂ ದೇವನೊಬ್ಬ; ನಾಮ ಹಲವು. ಅವನನ್ನು ಬಿಡೋಣ.

೩. ಉಪದೇವತೆಗಳಿಗೇ ಉಪಚಾರ

ಆದರೆ ಗಣೇಶ, ಹನುಮಂತ, ಅಯ್ಯಪ್ಪ ಈ ದೇವತೆಗಳ ಅಸ್ತಿತ್ವ ಹೇಗೆ? ಭಾರತ ಬಿಟ್ಟು ಬೇರೆಡೆ ಅವರ ‘ನಾಮ’ ಇದೆಯೆ? ಸರ್ವದಾ ಇಲ್ಲ. ಅದರಂತೆ ವೆನೆಜುಯೆಲಾದ ಇಂಥದೇ ದ್ವಿತೀಯ ಸ್ಥಾನದ ದೇವತೆ ನಮಗೆ ಗೊತ್ತೇ ಇಲ್ಲ. ವಿ. ಸೀ. ಹೇಳುತ್ತಿದ್ದರು: “ಪ್ರಧಾನ ದೇವರಿಗಿಂತ, ಅವರ ಬಂಟರು, ಎರಡನೇ ಸ್ಥಾನದಲ್ಲಿರುವವರೇ ನಮಗೆ ಹೆಚ್ಚು ಪೂಜಾರ್ಹರು". ಶ್ರೀರಾಮ-ಹನುಮಂತ; ಈಶ್ವರ-ಬಸವಣ್ಣ; ರಂಗನಾಥ-ಗರುಡ; ಈ ಜೋಡಿಗಳನ್ನು ಗಮನಿಸುವುದು.

ಇಂಥದೇ (ಎರಡನೇ) ಸ್ಥಾನದಲ್ಲಿರಬಹುದಾದ ‘ಸತ್ಯನಾರಾಯಣ’ ಮಾತ್ರ ದೇವತೆಗಳನ್ನಲ್ಲದೇ, ಏಕಮೇವಾದ್ವಿತೀಯ ‘ದೇವರು’ ಎಂಬವನನ್ನೂ, ಜನಪ್ರಿಯತೆಯಲ್ಲಿ ಹಿಂದೆ ಹಾಕಿಬಿಟ್ಟಿದ್ದಾನೆ,  a leap forward ರೀತಿಯಲ್ಲಿ.  ಹಾಗೆ ನೋಡಿದರೆ, ಹರಿ-ಹರಾದಿಗಳು ಪುರಾಣ ಕಾಲದಿಂದಲೂ ಬದುಕಿದ್ದವರು. ಅಗಣಿತವಾದ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದವರು. ಆದರೆ ಈ ಸತ್ಯನಾರಾಯಣ ಪುರಾಣ ಕಾಲದವನೇನಲ್ಲ. ನಮ್ಮ ಇತಿಹಾಸ ಕಾಲದಲ್ಲಿ, ಸದ್ದಿಲ್ಲದೆ ಆವಿರ್ಭವಿಸಿದವ.

೪. ರೇವಾಖಂಡದ ಅರೆ ಸತ್ಯ

“ಇದೇನು ಹೀಗೆ ಹೇಳುತ್ತೀರಿ. ಸತ್ಯನಾರಾಯಣ ಕಥೆ ‘ಸ್ಕಂದ ಪುರಾಣದ ರೇವಾಖಂಡದಲ್ಲಿ’ ನೋಡಸಿಗುತ್ತದಲ್ಲ?" ಎಂದು ಯಾರಾದರೂ ಕೇಳಬಹುದು. ಅವನಿಗಾಗಿ ನಾನು ರೇವಾಖಂಡ ಅಷ್ಟೇ ಏಕೆ, ಆ ಪುರಾಣದ ಎಲ್ಲ ಖಂಡಗಳನ್ನು ತಿರುವಿ ಹಾಕಿದೆ, ನನ್ನ ಕೈಗೆ ಸಿಕ್ಕಲಿಲ್ಲ. ‘ಸತ್ಯ’ವನ್ನು ಪುರಸ್ಕರಿಸುವ ಈ ‘ನಾರಾಯಣ’ನಿಗೆ ‘ಅಸತ್ಯ’ದ ಆರೋಪ ಮಾಡುವುದು ಸಲ್ಲ! ಆದಾಗ್ಯೂ ರೇವಾಖಂಡದಲ್ಲಿ ಅವನು ಕಾಣಿಸಿಕೊಂಡದ್ದೆಂದರೆ ಅದು ‘ಅರ್ಧ ಸತ್ಯ’ದ ಮಾತಾಗುತ್ತದೆ. ಯಾಕೆಂದರೆ, ಸತ್ಯನಾರಾಯಣನ ಆ ಪ್ರಚಲಿತ ವ್ರತಕಥೆಯಲ್ಲಿ ಹೇಳಿದ್ದಂತೆ, ಅವನ ಚರಿತ್ರೆಯಾಗಲೀ, ಪೂಜಾ ವಿಧಾನವಾಗಲೀ ರೇವಾಖಂಡದಲ್ಲಿ ಇದ್ದದ್ದು ‘ಶ್ರೀ ಸತ್ಯನಾರಾಯಣ -ವಿಪ್ರಸಂವಾದ ವರ್ಣನೆ’ ಎಂಬ ೩೨ ಶ್ಲೋಕಗಳ ಪ್ರಸಂಗ ಮಾತ್ರ. ಅದರಲ್ಲಿ ಓರ್ವ ಬಡ ಬ್ರಾಹ್ಮಣನು, ಶ್ರೀ ಸತ್ಯನಾರಾಯಣನ ಆದೇಶದ ಮೇರೆಗೆ ಅವನನ್ನು ಪೂಜಿಸಿ ಶ್ರೀಮಂತನಾದ -ಎಂಬಷ್ಟೇ ಬಂದಿದೆ. ಮಿಕ್ಕುಳಿದ ಕಥೆಗಳು, ವ್ರತ-ನಿಯಮಗಳು, ನಾನು ಬಲ್ಲಷ್ಟರ ಮಟ್ಟಿಗೆ, ಗೋರಖಪುರದ ಸುಪ್ರಸಿದ್ಧ ಮಾಸಪತ್ರಿಕೆಯಾದ ‘ಕಲ್ಯಾಣ ಕಲ್ಪತರು’ವಿನ ೨೫ನೆಯ ಸಂಪುಟದಲ್ಲಿ ವರ್ಣಿತವಾದವು; ಅವರು, ಆ ಕಾಲಕ್ಕೆ ಜನ ಬಳಕೆಯಲ್ಲಿದ್ದದ್ದನ್ನೇ ‘ಗ್ರಂಥಸ್ಥ’ವಾಗಿ ಮಾಡಿರಬೇಕು.

೫. ಹುಟ್ಟು ಏಂದು?

ತಿಳಿಯಬೇಕಾದ ಮಾತೆಂದರೆ ನಮ್ಮ ಅಷ್ಟಾದಶ ಪುರಾಣಗಳು, ಇನ್ನು ಹತ್ತಾರು, ಕ್ರಿಸ್ತಶಕದ ಆರಂಭ ಕಾಲದಿಂದ ೧೪-೧೫ ಶತಮಾನಗಳ ಅವಧಿಯಲ್ಲಿಯೆ ರಚಿತವಾದವುಗಳು. ಅಲ್ಲದೆ ಕಾಲಕಾಲಕ್ಕೆ ಪ್ರಕ್ಷಿಪ್ತಗಳು (interpolations) ಸೇರಿಕೊಂಡೇ ಇರುತ್ತವೆ. ಈ ಹಿನ್ನಲೆಯಲ್ಲಿ ನಮ್ಮ ಪರಮಪ್ರಿಯ ಸತ್ಯನಾರಾಯಣನು ಇತಿಹಾಸಕಾಲದಲ್ಲೇ ಆಗಲಿ, ಅದೆಂದು ಅವತರಿಸಿದ?

೫.೧ ಪುರಾಣ ಕಾಲವೆ?

“ಹಾಂ, ಅವನು ಪುರಾಣಕಾಲದಲ್ಲೇ ಇದ್ದವ" ಎಂದು ಯಾರೂ ನನ್ನೊಡನೆ ವಾದಕ್ಕೆ ನಿಲ್ಲಬಹುದು. ಅವರಿಗೆ ನನ್ನ ಮರುಪ್ರಶ್ನೆ ಇಷ್ಟೇ- ವೇದಕಾಲದಿಂದ ಮಹಾಭಾರತದ ಕಾಲದವರೆಗೆ ಅವನ ಹೆಸರು ಎಲ್ಲಾದರೂ ಬಂದಿದೆಯೆ? ಹೇಳಿರಿ- ‘ಸತ್ಯ’ ಎಂಬು ಪೂರ್ವಪದವಿರುವ ಅನೇಕ ಹೆಸರುಗಳು ಕಂಡು ಬರುತ್ತವೆ. ಉದಾಹರಣೆಗೆ ಸತ್ಯವ್ರತ, ಸತ್ಯಕಾಮ, ಸತ್ಯಜಿತ, ಸತ್ಯದೇವ, ಸತ್ಯಾರ್ಥಿ -ಏನೆಲ್ಲ. (ಸ್ತ್ರೀಯರಲ್ಲಿಯೂ ‘ಸತ್ಯ’ರಿದ್ದಾರೆ. -ಸತ್ಯಭಾಮೆ, ಸತ್ಯವತಿ) ಆದರೆ ಎಲ್ಲಿಯೂ ‘ಸತ್ಯನಾರಾಯಣ’ ಇಲ್ಲವಲ್ಲ? ‘ವಿಷ್ಣು-ಸಹಸ್ರನಾಮ’ ಇದರ ಒಂದು ಸಹಸ್ರ ಹೆಸರುಗಳಲ್ಲಿಯೂ ಈ ‘ನಾರಾಯಣ’ ಸಿಗಲಿಲ್ಲ. ಇದರಿಂದ ಅವನು ನಮ್ಮ ಇತಿಹಾಸ ಕಾಲದಲ್ಲಿ ಅವತರಿಸಿ ‘ಸಂಭವಾಮಿ ಯುಗೇ ಯುಗೇ’ ಎಂಬುದನ್ನು ಸಾರ್ಥಕಗೊಳಿಸಿದ್ದಾನೆಂದಂತಾಯಿತು. ಆದರೆ ಎಂದಿನಿಂದ?

೫.೨ ಮಧ್ಯ ಕಾಲೀನವೆ?

ನಮ್ಮ ಪ್ರಾಚೀನ ಹಾಗೂ ಮಧ್ಯಕಾಲೀನ ಶಾಸನಗಳಲ್ಲಿ ಸಾವಿರಾರು ಗುಡಿಗಳ ಕಟ್ಟೋಣದ, ಅವುಗಳಿಗೆ ದತ್ತಿಬಿಟ್ಟಿದ್ದರ ಪ್ರಸ್ತಾಪ ಬರುತ್ತದೆ. ಅಂಥ ಅನೇಕಾನೇಕ ಗುಡಿಗಳು ಇಂದಿಗೂ ದೇಶದ ಉದ್ದಗಲಕ್ಕೂ ನೋಡಸಿಕ್ಕುತ್ತವೆ. ಆದರೆ ಎಲ್ಲಿಯೂ ಸತ್ಯನಾರಾಯಣನ ಶತಮಾನಗಳ ಹಿಂದಿನ ಗುಡಿಯ ನಿರ್ಮಾಣವಾಗಿಲ್ಲ. ಪೇಶ್ವೆಯರು (೧೮ನೆಯ ಶತಮಾನ) ನಾನಾ ಬಗೆಯ ವ್ರತಗಳನ್ನು ಆಚರಿಸುತ್ತಿದ್ದವರು. ಗೊತ್ತಿದ್ದರೆ, ಕಾಮಿತಾರ್ಥಗಳನ್ನು ಪೂರೈಸುವ ಈ ವ್ರತವನ್ನು ಖಂಡಿತವಾಗಿ ಆಚರಿಸುತ್ತಿದ್ದರು ಮತ್ತು ಅದರ ಉಲ್ಲೇಖವು ಒಂದಾದರೂ ಕಡತದಲ್ಲಿ ತಪ್ಪದೇ ಇರುತ್ತಿತ್ತು. ಆದರೆ ಈ ಪ್ರಸ್ತಾಪವಿಲ್ಲ. ಹೋಗಲಿ; ಯಾವುದಾದರೂ ಪ್ರಾಚೀನ ಇಲ್ಲವೆ ಮಧ್ಯಕಾಲೀನ ಸಾಹಿತ್ಯ ಕೃತಿಗಳಲ್ಲಿ ಕಾಣಿಸಿಕೊಳ್ಳಬಾರದಿತ್ತೆ? ನನಗಂತೂ ಕಣ್ಣಿಗೆ ಬಿದ್ದಿಲ್ಲ.

ಹಾಂ, ಸುಪ್ರಸಿದ್ಧ ಕಥಾಸರಿತ್ಸಾಗರದಲ್ಲಿ ಒಬ್ಬ ನಾರಾಯಣ ಬರುತ್ತಾನೆ. ಆದರೆ ಅವನು ‘ಮಿಥ್ಯ ನಾರಾಯಣ’! ಹೌದು ಆ ಕಥೆ ಹೀಗಿದೆ. ಹೀಗೆಯೇ ಒಬ್ಬ, ತಾನು ವೈಕುಂಠದ ಸಾಕ್ಷಾತ್ ನಾರಾಯಣನೆಂದೂ ಇಷ್ಟಾರ್ಥಗಳನ್ನು ಪೂರೈಸುವವನೆಂದೂಹೇಳಿಕೊಳ್ಳುತ್ತಾನೆ. ಜನ ಅವನನ್ನು ದೇವರೆಂದೇ ತಿಳಿದು ಪೂಜಿಸುತ್ತಾರೆ. ನೈವೇದ್ಯಾದಿಗಳನ್ನು ಅರ್ಪಿಸುತ್ತಾರೆ! ತ್ರಿಲೋಕ ಸಂಚಾರಿಯಾದ ನಾರದನಿಗೆ ಅದು ಗೊತ್ತಾಗಿ ನಿಜ-ನಾರಾಯಣನಿಗೆ ವಸ್ತು ಸ್ಥಿತಿಯನ್ನು ತಿಳಿಸುತ್ತಾನೆ. ಮತ್ತು “ನೀನು ಸ್ವತಃ ಭೂಲೋಕಕ್ಕೆ ಹೋಗಿ ನಿಜವಾದ ನಾರಾಯಣ ನೀನೇ ಎಂದು ತೋರ್ಪಡಿಸು" ಎಂದು ಸೂಚಿಸುತ್ತಾನೆ. ಇತ್ಯಾದಿ.

ಒಂದು ಮಾತ್ರ ನಿಶ್ಚಿತ. ಸತ್ಯನಾರಾಯಣನು ದಕ್ಷಿಣ ಭಾರತದಲ್ಲಂತೂ ಅವತರಿಸಿಲ್ಲ. ಉತ್ತರ ಭಾರತ? ಸಾಧ್ಯತೆ ಇದೆ. ಯಾಕೆಂದರೆ ವ್ರತ ಕಥಾ ಭಾಗದಲ್ಲಿ ಸಿಂಧೂನದಿ ಹಾಗೂ ಕಾಶಿ ಪಟ್ಟಣಗಳ ಉಲ್ಲೇಖ ಬರುತ್ತದೆ. ಹಾಗಿದ್ದರೆ, ಎಂದು?

೫.೩ ಇತ್ತೀಚೆ, ಎರಡು ಶತಮಾನಗಳ ಹಿಂದೆಯೆ?

ಕಲಕತ್ತಾ ವಿಶ್ವವಿದ್ಯಾಲಯವು ೧೯೩೦ರಲ್ಲಿ ‘ಸತ್ಯಾಪೀರೇರ್ ಕಥಾ’ ಎಂಬ ಬಂಗಾಲೀ ಕೃತಿಯನ್ನು ಪ್ರಕಟಿಸಿದೆ. ಬರೆದವ ರಾಮೇಶ್ವರ ಭಟ್ಟಾಚಾರ್ಯ ಎಂಬುವನು. ಪೀರ್,  ಮುಸ್ಲಿಂ ಜನಾಂಗದ ಬಿಡಿ ಸನ್ಯಾಸಿಗಳಿವರು. ಹಿಂದೂಗಳಲ್ಲಿ ಕಾವಿ ಬಟ್ಟೆ ಧರಿಸಿದ ಇಂಥ ಸಾಧುಗಳಿರುವ ಹಾಗೂ ಪೀರರು ನೂರಾರು ಜನ ಇದ್ದಾಗ, ಅವರುಗಳಲ್ಲಿ ನಿಜವಾದ ‘ಸಚ್ಚಾ’ ಆಗಿರುವಂಥವವ ಯಾರು? ಅಂಥವನನ್ನು ಗುರುತಿಸಿ ಸಚ್ಚಾ ಅಥವಾ ಸತ್ಯಾ-ಪೀರ್ ಎಂದು ಕರೆದರು. ಅವನನ್ನು ‘ಉರುಸು’ ಮೂಲಕ ಭಕ್ತಿಯಿಂದ ಹಿಂದೂಗಳು ಸಹ ನಡೆದುಕೊಂಡರು. ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇದು ಆಗಿಹೋದದ್ದು ಪ್ರಾಯಶಃ ೧೮ನೆಯ ಶತಮಾನದಲ್ಲಿ. ಆಗ ಓರ್ವ ಹಿಂದೂ ಧರ್ಮಾಭಿಮಾನಿ ನಮ್ಮ ದೇವರನ್ನೇ ‘ಸತ್ಯ’ನೆಂದು ಪರಿಭಾವಿಸಿ ಪ್ರತ್ಯೇಕ ಪೂಜೆಯನ್ನೇಕೆ ಮಾಡಬಾರದು ಎಂದು ಯೋಚಿಸಿರಬೇಕು.

ಇದನ್ನು ನಾನು ಹುಟ್ಟಿಸಿಕೊಂಡು ಹೇಳ್ತಾ ಇಲ್ಲಾರೀ, ಜಾಗತಿಕ ಖ್ಯಾತಿಯ ವಿದ್ವಾಂಸರಾದ ಡಾ| ಡಿ. ಡಿ. ಕೋಸಂಬಿಯವರು ಒಂದೆಡೆ ಸೂಚಿಸಿದ್ದಾರೆ:
The most remarkable [new cults transcending religious barriers] was Satyaa pir, for whose cult there seems to be no real evidence before the beginning of the 18th century. The saint's life was rapidly developed and popularized by such Hindu poems as 'Satya Pirer Katha'... The cult spread all over India in the GUISE of 'Satya Narayan' - popular democratic Hindu observance, WITHOUT ANY EARLIER RELIGIOUS SANCTION OR FIXED DATE. (ದೊಡ್ಡ ಅಕ್ಷರಗಳ ಒತ್ತು ನನ್ನದು).

ಅಂತೂ ನಮ್ಮ ಸತ್ಯ ನಾರಾಯಣನು ಉತ್ತರ ಭಾರತದಲ್ಲಿ, ಎರಡು ಶತಕಗಳ ಹಿಂದೆ ಅವತಾರ ಮಾಡಿದ. ಆಮೇಲೆ ಪಶ್ಟಿಮ ಭಾರತಕ್ಕೆ ಎಂದರೆ ಮಹಾರಾಷ್ಟ್ರಕ್ಕೆ ಕಳೆದ ಶತಮಾನದಲ್ಲಿ ಬೆಳೆದು, ೧೯-೨೦ ಶತಮಾನ ಕಾಲದಲ್ಲಿ ಕರ್ನಾಟಕದಲ್ಲಿ ವ್ಯಾಪಿಸಿದ ಎಂದು ಸ್ಥೂಲವಾಗಿ ಗ್ರಹಿಸೋಣ.

ಅವನ ವ್ರತಪೂಜೆಯ ಹಾಗೂ ಕಥೆಯ ಕನ್ನಡ ಭಾಷಾಂತರಗಳು ನಮಗಾಗಿ ಪ್ರಕಟವಾಗಬೇಕಷ್ಟೆ. ಅಂಥದೊಂದು ‘ಪೋಥಿ’ ಪುಸ್ತಕವು ೧೮೮೦ನೆಯ ದಶಕದಲ್ಲಿ ಬೆಳಗಾವಿಯಿಂದ ಪ್ರಕಟವಾಯಿತು. ಆಮೇಲೆ ೧೯೨೦ರ ಸುಮಾರಿಗೆ ಅಚ್ಚಿನ ಮೊಳೆಗಳ ಮುದ್ರಣ ಹೊರಬಂದಿತು. ಅದನ್ನು ಹೊರತರುತ್ತ ಕಿತ್ತೂರಿನ ನರಸಿಂಹಾಚಾರ್ಯ ಪುಣೇಕರರು (‘ಕಾವ್ಯಾನಂದ’) ಈ ವ್ರತವು ತಮ್ಮ ಭಾಗದಲ್ಲಿ (ಎಂದರೆ ಮುಂಬಯಿ ಕರ್ನಾಟಕದಲ್ಲಿ) ‘ಈಚೆಗೆ’ ೩೫-೪೦ ವರ್ಷಗಳ ಹಿಂದಿನಿಂದ ಪ್ರಚಾರದಲ್ಲಿದೆ ಎಂದಿದ್ದಾರೆ.

೬. ನಿಜವೋ? ಪ್ರಾಮಾಣಿಕವೋ?

ಅಂದ ಹಾಗೆ ‘ಸತ್ಯ’ ಎನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ‘ನಿಜವಾದ’ ಎನ್ನುವುದು. ಕೋಸಾಂಬಿಯವರು ಹೇಳಿರುವುದು ಈ ಅರ್ಥದಲ್ಲಿ (ಸಚ್ಚಾ). ಆದರೆ ಸತ್ಯ ಎನ್ನುವುದಕ್ಕೆ ‘ಪ್ರಾಮಾಣಿಕವಾದ’ ಎಂಬುದೂ ಬಳಕೆಯಲ್ಲಿದೆಯಲ್ಲ? ನಮಗೆ ಗೊತ್ತಿದ್ದ ಹಾಗೆ, ಪೂಜಾ ಪುಸ್ತಕದಲ್ಲಿರುವ ಕತೆಗಳಲ್ಲಿ ಹೆಚ್ಚಿನವು ವ್ಯಾಪಾರೀ ವರ್ಗದವರಿಗೆ ಸಂಬಂಧಿಸಿವೆ. ಆ ವರ್ಗದಲ್ಲಿ ವ್ಯವಹಾರಗಳಲ್ಲಿ ಪ್ರಾಮಾಣಿಕತೆಯ ಅಂಶ ಕೊಂಚ ಕಡಿಮೆ ಎಂದು ತಿಳಿದು ಆ ಕಥನಕಾರ ಸೂಚ್ಯವಾಗಿ ಅವರನ್ನೂ ಎಚ್ಚರಿಸಬಯಸಿರಬಹುದೆ? ಅದಕ್ಕೇನೆ ಸತ್ಯನಾರಾಯಣ ದೇವರು ದಾರಿ ತಪ್ಪಿದವರನ್ನು ಅವರ ಮೇಲೆ ಕ್ರುದ್ಧನಾಗಿ ಶಿಕ್ಷಿಸುತ್ತಾನೆ; ಕ್ಷಮೆ ಕೇಳಿದರೆಂದು ಕ್ಷಮಿಸುತ್ತಾನೆ ಎಂಬ ಕಥಾಂಶ ನಮಗೆ ತಿಳಿದದ್ದೇ.

೭. ಸತ್ಯನಾರಾಯಣ ಪ್ರಸಾದ

ಸತ್ಯನಾರಾಯಣ ಪ್ರಸಾದದ ಹುಟ್ಟು ತುಂಬಾ ಮೋಜಿನದಾಗಿದೆ. ಅದು ಅತ್ಯಂತ ಸ್ವಾದಿಷ್ಟವಾದದ್ದು ಎನ್ನುವುದು ಹೇಗಾದರೂ ಇರಲಿ, ಅದರ ಘಟಕಗಳು (ಹಾಲು, ಸಕ್ಕರೆ, ಸಜ್ಜಿಗೆ, ತುಪ್ಪ, ಬಾಳೆಹಣ್ಣು) ಇವೆಲ್ಲಾ ಸಮ ಪ್ರಮಾಣದಲ್ಲಿ ಇರಬೇಕೆಂದು ಹೇಳಿದೆ. ಈ ಬಗೆಯ Combination ಇರುವ ಯಾವ ಖಾದ್ಯ ಪದಾರ್ಥವೂ, ನಮ್ಮ ಹಳೆಯ ಪಾಕಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿಲ್ಲ. ಈ recipe ಆ ಕಥನಕಾರನದೇ ವಿಶಿಷ್ಟವಾದದ್ದಿರಬೇಕು. ಎಂತಲೇ ಅದರ ವಿವರವನ್ನು ಕೊಟ್ಟಿದ್ದಾನೆ. ಪೂಜಾ ಪುಸ್ತಕಗಳಲ್ಲಿ ನೈವೇದ್ಯದ ಪದಾರ್ಥವನ್ನು ಹೇಗೆ ತಯಾರಿಸಬೇಕೆಂದು ಬೇರೆಲ್ಲಿಯೂ ಹೇಳಿದುದಿಲ್ಲ. ಇಷ್ಟೊಂದು ರುಚಿಕರ ನೈವೇದ್ಯವನ್ನು ಸ್ವೀಕರಿಸದೆ ಹಾಗೇ ಹೋಗಬಾರದು; ಸತ್ಯನಾರಾಯಣ ಸಿಟ್ಟಿಗೇಳುತ್ತಾನೆ ಎಂಬ ಎಚ್ಚರಿಕೆ ಬೇರೆ! ಅದರ ಅಗತ್ಯವೇ ಇದ್ದಿಲ್ಲ.

೮. ಸತ್ಯನಾರಾಯಣ = ವಿಷ್ಣು?

‘ನಾರಾಯಣ’ ಎಂಬ ಉತ್ತರ ಪದದ ಬಗ್ಗೆಯೂ ನನಗೆ ತುಸು ಸಂದೇಹವಿದೆ? ಈ ನಾರಾಯಣ ನಮ್ಮ ಹರಿ-ವಿಷ್ಣುವೇ ಇದ್ದಿರಬಹುದೆ? ಸ್ವತಃ ವ್ರತಕಾರನಿಗೇ ಆ ಸಂಶಯವಿದೆ “ಅವನನ್ನು ‘ಕಾಲ’ನೆಂದೂ, ‘ಈಶʼನೆಂದೂ ಕರೆಯುವರು" ಎನ್ನುತ್ತಾನೆ. ಅಲ್ಲದೆ ಪೂಜೆಯನ್ನು ಸಂಜೆಗೆ ಮಾಡುವುದು ವಿಹಿತ ಎನ್ನುತ್ತಾನೆ. ವೈಷ್ಣವರಲ್ಲಿ ಸಾಯಂ-ಪೂಜೆ ಸಾಮಾನ್ಯವಾಗಿ ರೂಢಿಯಲ್ಲಿಲ್ಲ. ಇನ್ನೊಂದು ಸಂದೇಹವೆಂದರೆ, ಸತ್ಯನಾರಾಯಣನ ಪೂಜೆಯನ್ನು ಯಾವ ದಿನವಾದರೂ ಮಾಡಬಹುದಂತೆ! ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ದೇವರ ಪೂಜೆಗೆ ವರ್ಷದಲ್ಲಿ ನಿಶ್ಚಿತ ದಿನ ಇರುತ್ತದಲ್ಲವೆ? ರಾಮನವಮಿ, ನೂಲ ಹುಣ್ಣಿಮೆ, ದುರ್ಗಾಷ್ಟಮಿ ಇತ್ಯಾದಿ.

ಇದರ ವ್ಯಂಗ್ಯವೆಂದರೆ ಈತ ವಿಷ್ಣುವೇ ಎಂದು ಬಗೆದು ಅದಕ್ಕೆ ಪ್ರತಿಯಾಗಿ ‘ವರದ ಶಂಕರ ವ್ರತ’ ಸೃಷ್ಟಿಯಾಯಿತು. ಇತ್ತ ಗಣೇಶನ ಭಕ್ತರಿಗೂ ಹಾಗೆನಿಸಿತು. ಅವರಲ್ಲೊಬ್ಬ ‘ಸತ್ಯ ವಿನಾಯಕ ವ್ರತ’ವನ್ನು ಹುಟ್ಟು ಹಾಕಿದ!

೯. ಪೂಜೆಯ ಸಾರ್ವತ್ರಿಕತೆ

ಮತ್ತೊಂದು, ಈ ಪೂಜೆಯನ್ನು ನದಿಯ ದಂಡೆಯ ಮೇಲೆ, ಅರ್ಥಾತ್ ಮನೆಯ ಹೊರಗೂ ಮಾಡಬಹುದೆಂಬ Concession ಬೇರೆ ಇದೆ. ಇನ್ನೊಂದು ವಿಚಿತ್ರವೆಂದರೆ, ಸಾಮಾನ್ಯವಾಗಿ, ಇಂಥ ಪೂಜೆಗಳಿಗೆ ಪುರೋಹಿತ ಇಲ್ಲವೆ ಭಡಜಿ ಬೇಕಾಗುತ್ತದೆ. ಇಲ್ಲಿ ಹಾಗಿಲ್ಲ, ಯಾರೂ -ಸ್ತ್ರೀಯರೇ ಇರಲಿ, ಬಡವರೇ ಇರಲಿ, ಸತ್ಯನಾರಾಯಣನ ಪೂಜೆಯನ್ನು ಮಾಡಬಹುದಾಗಿದೆ. ಈ ಸಾರ್ವತ್ರಿಕತೆ ನಿಜಕ್ಕೂ ಮೆಚ್ಚಬೇಕಾದದ್ದೇ. ಇಷ್ಟೇ, ಇದೆಲ್ಲ ವೈಷ್ಣವೀಯ ಪದ್ದತಿಗೆ ಹೊಂದುವಂತಹದಲ್ಲ. ಆದ್ದರಿಂದ ಇಲ್ಲಿಯ ನಾರಾಯಣ ಮೂಲ ವಿಷ್ಣುವಿನ ಸಾನ್ನಿಧ್ಯದವನಿರಲಿಕ್ಕಿಲ್ಲ. (ಕೆಲವು ಹಳೆಯ ಕರ್ಮದ ವೈಷ್ಣವ ಮನೆತನದವರು ಮಾಡುವುದೂ ಇಲ್ಲ)

೧೦. ಪೂಜೆ: ಅಂದು - ಇಂದು

ನನಗೆ ತೋಚಿದ ಪ್ರಕಾರ, ಈ ಕಾಮ್ಯಕ ವ್ರತವನ್ನು ಕಲ್ಪಿಸಿದವನ ಮನಸ್ಸಿನಲ್ಲಿ, ಸಾಮಾನ್ಯ ಜನತೆ ದೇವರಲ್ಲಿ ನಿಷ್ಠೆಯನ್ನಿರಿಸಿಕೊಂಡು ಪ್ರಾಮಾಣಿಕವಾಗಿ ಬಾಳಬೇಕು ಎಂಬ ವಿಚಾರವಿದ್ದೀತು ಈಗೇನಾಗಿದೆ? ಸತ್ಯನಾರಾಯಣನು ಬಡವರ ಗುಡಿಸಲನ್ನು ಬಿಟ್ಟು ಸಿರಿವಂತರ ಇಲ್ಲವೆ ಆಢ್ಯತೆಯಿರುವವರ ಭವನಗಳಿಗೆ ಸಾಗಿ ಬಂದಿದ್ದಾನೆ. ಮೂಲದ ಧಾರ್ಮಿಕ ಸ್ವರೂಪ ನೆಪಕ್ಕೆ ಉಳಿದು, ಪೂಜೆಗೆ ಸಾಮಾಜಿಕ ಮಹತ್ವವೇ ಹೆಚ್ಚಾಗಿ ಇದೆ. ಆಪ್ತರನ್ನು, ಸರಿಕರನ್ನು, ಕರೆಕರೆದು ಪ್ರಸಾದವನ್ನು ಕೊಟ್ಟು, ಮೃಷ್ಟಾನ್ನ ಭೋಜನ ಹಾಕಿ ಬೀಳ್ಕೊಡುವುದೇ ಹೆಚ್ಚು. ಈ ಪೂಜೆಯನ್ನು ಹಮ್ಮಿಕೊಳ್ಳುವ ನಿಮಿತ್ತಗಳೂ (ಮದುವೆ, ಉಪನಯನ, ಪ್ರಮೋಶನ, ವಾಸ್ತು ಇತ್ಯಾದಿ) ಅದಕ್ಕನುಗುಣವಾದವುಗಳೇ.

ಏನೇ ಇರಲಿ ನಮ್ಮೀ ಸತ್ಯ ನಾರಾಯಣನ ಜನಪ್ರಿಯತೆ ಸಮಾಜದಲ್ಲಿ ಇನ್ನಷ್ಟು ಹಬ್ಬಲಿ ಎಂದು ಹಾರೈಸುವೆ.
 

------

ಕನ್ನಡ ಕಲಿ ಬಿತ್ತರಿಕೆ, ಮೇ ೦೫, ೨೦೨೫

(ಸಂಶೋಧನ ಲೇಖನ)
ಈತ ಸತ್ಯನಾರಾಯಣ!,.

ಲೇಖಕರು : ನಾಡೋಜ, ಡಾಕ್ಟರ್‌ ಶ್ರೀನಿವಾಸ ಹಾವನೂರ
ಓದು: ವಿಶ್ವೇಶ್ವರ ದೀಕ್ಷಿತ‌

ಸಂಪರ್ಕ.:  ನಮೋವಿಶ್ ಯ್ಯಾಟ್ ಯಾಹೂ  ಡಾಟ್ ಕಾಮ್
ನಾನು, ಸಪ್ನಾ ಗೂಗ್ಲೇ

ತಾಗುಲಿ: Satya Narayana,Srinivas Havanur,Sachcha Pir,Vishweshwar Dixit,Kannada Kali

ಏನಂತೀರಿ?

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.